highschool history by cyril dais

ಶಂಕರಪುರದ ಸಂತಜೋನರ ಪ್ರೌಢಶಾಲಾ ಸ್ಥಾಪನೆಯ ಚಾರಿತ್ರಿಕ ಹಿನ್ನಲೆ

“ಅವಿದ್ಯಾವಂತನು ಪಶುವಿಗೆ ಸಮಾನನು” ಎಂಬ ನಾಣ್ನುಡಿ ಇದೆ. ಕಾಲು ಶತಮಾನದ ಹಿಂದೆ ಶಂಕರಪುರದ ಆಸುಪಾಸಿನ ಮಕ್ಕಳಿಗೆ ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆಯು ಶಿಕ್ಷಣವನ್ನು ನೀಡಿ ಅವಿದ್ಯಾವಂತರ ಸಮಸ್ಯೆ ಉದ್ಬವಿಸದಂತೆ ಕಾರ್ಯ ನಿರ್ವಹಿಸುತ್ತಿತ್ತು. ಆದರೆ ಪ್ರೌಢ ಶಿಕ್ಷಣವನ್ನು ಪಡೆಯಲು ದೂರದ ಶಿರ್ವ, ಕಟಪಾಡಿ ಹಾಗೂ ಇನ್ನಂಜೆಯಲ್ಲಿರುವ ಪ್ರೌಢಶಾಲೆಗಳಿಗೆ ಹೋಗ ಬೇಕಾಗಿತ್ತು. ಈಗಿರುವ ಹಾಗೆ ಆ ಕಾಲದಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಸಂಚರಿಸುತ್ತಿರಲಿಲ್ಲ. ಇನ್ನಂಜೆಗೆ ಹೋಗ ಬೇಕಾದರೆ ನಡೆದುಕೊಂಡೇ ಹೋಗ ಬೇಕಾಗಿತ್ತು. ಪ್ರೌಢಶಿಕ್ಷಣವನ್ನು ಪಡೆಯಲು ಉಂಟಾದ ಸಮಸ್ಯೆಗಳನ್ನು ಪರಿಹರಿಸಲು ಶಂಕರಪುರದಲ್ಲಿಯೇ ಒಂದು ಪ್ರೌಢಶಾಲೆಯನ್ನು ಆರಂಭಿಸಬೇಕೆAಬ ಸದಾಭಿಪ್ರಾಯವು ಪಾಂಗಾಳ ಧರ್ಮ ಕ್ಷೇತ್ರದ ಆಗಿನ ಮುಖ್ಯ ಧರ್ಮಗುರುಗಳಾಗಿದ್ದ ದಿವಂಗತ ವಂದನೀಯ ಜಿ. ಬಿ. ಡಿಸೋಜರವರಿಗೆ ಬಂತು, ಆ ಸಮಯದಲ್ಲಿ ನಾನು ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ದುಡಿಯುತ್ತಿದ್ದೆ. ಮಾತ್ರವಲ್ಲದೆ ಪಾಂಗಾಳ (ಶಂಕರಪುರ) ಧರ್ಮಕ್ಷೇತ್ರದ ಆಡಳಿತದಾರನಾಗಿಯೂ ಸೇವೆ ಸಲ್ಲಿಸುತ್ತಿದ್ದೆನು. ಪ್ರೌಢಶಾಲೆಯನ್ನು ಸ್ಥಾಪಿಸಬೇಕೆಂಬ ನಮ್ಮ ಆಕಾಂಕ್ಷೆಯನ್ನು ವಂದನೀಯ ಧರ್ಮ ಗುರುಗಳು ನನ್ನ ಗಮನಕ್ಕೆ ತಂದು ನನ್ನ ಅಭಿಪ್ರಾಯವನ್ನು ಕೇಳಿದಾಗ ನಾಣು ಸಂತೋಷದಿAದ ಒಪ್ಪಿದೆನು. ಈ ವಿಚಾರವನ್ನು ಧರ್ಮಕ್ಷೇತ್ರದ ಪ್ರಮುಖ ಗಣ್ಯರ ಅಭಿಪ್ರಾಯವನ್ನು ಪಡೆದು ಮುಂದುವರೆಸುವ ತೀರ್ಮಾನಕ್ಕೆ ಬಂದೆವು. ಅಂತೆಯೇ ಮುಂದಾಳುಗಳಾದ ಶ್ರೀ ಪಿಂಟನಿ ಡೇಸ, ಶ್ರೀ ಬೆನೆಡಿಕ್ಟ್ ಮಾರ್ಟಿಸ್, ಶ್ರೀ ಜೋನ್ ಲೋಬೋ, ಶ್ರೀ ಯಚ್. ಆರ್. ಆಳ್ವ ಹಾಗೂ ದಿವಂಗತ ಶ್ರೀ ಮೌರಿಸ್ ಡೇಸಾ ಇವರೊಡನೆ ಈ ಯೋಜನೆಯ ಪ್ರಸ್ತಾಪವನ್ನು ತಿಳಿಸಿದಾಗ ಎಲ್ಲರೂ ಯಾವ ಆಕ್ಷೇಪವನ್ನೂ ಎತ್ತದೆ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದರು. ಪ್ರೌಢಶಾಲೆಯನ್ನು ಸ್ಥಾಪನೆ ಮಾಡಬೇಕಾದರೆ ಧರ್ಮಕ್ಷೇತ್ರದ ಜನರ ಮಹಾಸಭೆಯನ್ನು ಕರೆದು ಅಭಿಪ್ರಾಯವನ್ನು ಪಡೆದು ನಿರ್ಣಯವನ್ನು ಕೈಗೊಂಡು ಮಂಜೂರಾತಿಗಾಗಿ ಆ ನಿರ್ಣಯವನ್ನು ಧರ್ಮಾಧ್ಯಕ್ಷರ ಬಳಿಗೆ ಕಳುಹಿಸಲಾಯಿತು. ಆದರೆ ಧರ್ಮಾಧ್ಯಕ್ಷರು ನಮ್ಮ ನಿರ್ಣಯವನ್ನು ಮಂಜೂರು ಮಾಡದೆ ತಡೆಹಿಡಿದರು. ಆಗ ನಾವು ಮೇಲೆ ನಾನು ಉಲ್ಲೇಖಿಸಿದ ಗಣ್ಯರು ಹಾಗೂ ಮುಖ್ಯ ಗುರುಗಳ ಸಂಗಡ ಧರ್ಮಾದ್ಯಕ್ಷರಲ್ಲಿಗೆ ತೆರಳಿ ಅವರನ್ನು ಕಂಡೆವು. ಪ್ರೌಢಶಾಲೆಯ ನಿರ್ಣಯದ ಮಂಜೂರಾತಿಯ ವಿಚಾರವಾಗಿ ನಾವು ಅವರೊಂದಿಗೆ ಚರ್ಚಿಸಿದಾಗ ಅವರು ತನ್ನ ಮೂರು ಶರ್ತಗಳನ್ನು ಒಪ್ಪುವುದಾದರೆ ನಿರ್ಣಯವನ್ನು ಮಂಜೂರು ಮಾಡುವುದಾಗಿ ತಿಳಿಸಿದರು. ಆ ಮೂರು ಶರ್ತಗಳಾವುವು ಎಂದರೆ ೧. ಪ್ರೌಢಶಾಲೆಯ ಸ್ಥಾಪನೆಗೆ ತಗಲುವ ವೆಚ್ಚಕ್ಕೆ ತನ್ನೊಡನೆ ಆರ್ಥಿಕ ಸಹಾಯವನ್ನು ಕೇಳಬಾರದು. ೨. ತಾನು ನೇಮಿಸುವ ಮುಖ್ಯೋಪಾಧ್ಯಾಯರನ್ನೇ ನಾವು ಒಪ್ಪಬೇಕು. ೩. ಮಂಜೂರಾತಿಯನ್ನು ಸರಕಾರದಿಂದ ಪಡೆಯುವ ಸಂಪೂರ್ಣ ಜವಾಬ್ದಾರಿಯನ್ನು ನಾವೇ ಹೊರಬೇಕು. ಈ ಮೂರು ಶರ್ತಗಳನ್ನು ನಾವು ಒಕ್ಕೊರಳಿನಿಂದ ಒಪ್ಪಿದ ಪರಿಣಾಮವಾಗಿ ಪ್ರೌಢಶಾಲೆಯನ್ನು ಸ್ಥಾಪಿಸಲು ಧರ್ಮಾಧ್ಯಕ್ಷರು ನಮ್ಮ ನಿರ್ಣಯವನ್ನು ಮಂಜೂರು ಮಾಡಿದರು. ಶಂಕರಪುರದಲ್ಲಿ ಸ್ಥಾಪನೆಯಾಗಲಿರುವ ಪ್ರೌಢಶಾಲೆ ಇನ್ನಂಜೆಗೆ ಹತ್ತಿರವಿದ್ದುದರಿಂದ ಇನ್ನಂಜೆ ಪ್ರೌಢಶಾಲೆಯ ಆಡಳಿತ ಮಂಡಳಿಯ ಆಕ್ಷೇಪ ಸಲ್ಲಿಕೆಯಾಗದಂತೆ ಮಾಡಲು ಧರ್ಮಾಧ್ಯಕ್ಷರ ಬಳಿಗೆ ತೆರಳಿದ ನಿಯೋಗದ ಸದಸ್ಯರೆಲ್ಲರೂ ಒಟ್ಟು ಸೇರಿ ಇನ್ನಂಜೆ ಪ್ರೌಢಶಾಲೆಯ ಆಗಿನ ಸಂಚಾಲಕರಾಗಿದ್ದ ಶ್ರೀ ಶ್ರೀಪತಿ ಆಚಾರ್ಯ ಇವರ ಮನೆಯಿರುವ ಉಡುಪಿಗೆ ಹೋಗಿ ಅವರನ್ನು ಕಂಡು ಪ್ರೌಢಶಾಲೆಯ ಸ್ಥಾಪನೆಗೆ ಆಕ್ಷೇಪವೆತ್ತದಂತೆ ಅವರ ಮನಸ್ಸನ್ನು ಒಲಿಸುವಲ್ಲಿ ಉಶಸ್ವಿಯಾದೆವು. ಹೊಸ ಪ್ರೌಢಶಾಲೆಯ ಮಂಜೂರಾತಿಗಾಗಿ ಅವಶ್ಯವಾಗಿ ಬೇಕಾಗುವಂತಹ ಎಲ್ಲಾ ದಸ್ತಾವೇಜುಗಳನ್ನು ತಯಾರಿಸಿ ಮಂಜೂರಾತಿಗಾಗಿ ಸರಕಾರಕ್ಕೆ ಸಲ್ಲಿಸಲಾಯಿತು. ಆದರೆ ಅನುದಾನಿತ ಪ್ರೌಢಶಾಲೆಯನ್ನು ಸ್ಥಾಪಿಸಲು ಮಂಜೂರಾತಿಯನ್ನು ದೊರಕಿಸುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆಗ ನಮ್ಮ ಶಂಕರಪುರದ ಕಾಂಗ್ರೆಸ್ಸಿನ ಯುವ ಕಾರ್ಯಕರ್ತ ದಿವಂಗತ ಶ್ರೀ ಅಗೊಸ್ತಿನ್ ಲೋಬೋರವರ ಸಂಪೂರ್ಣ ಸಹಕಾರ ಸಿಕ್ಕಿದುದು ನಮ್ಮ ಸೌಭಾಗ್ಯವೆನ್ನೆಬೇಕು. ಕಾಪು ಕ್ಷೇತ್ರದ ಶಾಸಕರಾಗಿದ್ದ ದಿವಂಗತ ಶ್ರೀ ಭಾಸ್ಕರ ಶೆಟ್ಟಿ ಇವರ ಮನ ಒಲಿಸಿ ಅವರ ಸಹಕಾರವನ್ನು ಪಡೆಯುವಲ್ಲಿ ರ್ಶರೀ ಅಗೊಸ್ತಿನ್ ಲೋಬೊ ಹಾಗೂ ಶಾಸಕರ ಪರಮಮಿತ್ರರಾದ ನಮ್ಮ ಶಾಲಾ ಅಧ್ಯಾಪಕರಾಗಿದ್ದ ಶ್ರೀ ರತ್ನಾಕರ ಶೆಟ್ಟಿ ಇವರ ಮೂಲಕ ನಾವು ಯಶಸ್ವಿಯಾದೆವು. ಮಾತ್ರವಲ್ಲದೆ ಆ ಸಮಯದಲ್ಲಿ ಕರ್ನಾಟಕ ರಾಜ್ಯದ ಆರ್ಥಿಕ ಮಂತ್ರಿಯಾಗಿ ಶ್ರೀ ವೀರಪ್ಪ ಮೊÊಲಿಯವರು ಅಧಿಕಾರದಲ್ಲಿ ಇದ್ದುದರಿಂದ ಶಾಸಕರು ಹಾಗೂ ಉಡುಪಿ ಲೋಕಸಭಾ ಸದಸ್ಯರಾಗಿದ್ದ ಶ್ರೀ ಓಸ್ಕರ್ ಫೆರ್ನಾಂಡಿಸ್ ಅವರ ಮೂಲಕ ಆರ್ಥಿಕ ಸಚಿವರ ಮನ ಒಲಿಸಿ ಪ್ರೌಢಶಾಲೆಯನ್ನು ಅನುದಾನಿತ ಶಾಲೆಯನ್ನಾಗಿ ಮಂಜೂರಾತಿ ಪಡೆಯಲು ನಮ್ಮಿಂದ ಸಾಧ್ಯವಾಯಿತು. ಆ ಸಮಯದಲ್ಲಿ ಶ್ರೀ ಅಗೋಸ್ತಿನ್ ಲೋಬೋರವರು ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಹಾಗೂ ಆರ್ಥಿಕ ಇಲಾಖೆಯ ಕಚೇರಿಗಳಲ್ಲಿ ನಮ್ಮ ಶಾಲೆಯ ಫೈಲುಗಳನ್ನು ಮಂಜೂರಾತಿಗಾಗಿ ಕಳುಹಿಸಲು ಶಾಸಕ ಶ್ರೀ ಭಾಸ್ಕರ ಶೆಟ್ಟರ ಶಾಸಕರ ಭವನದಲ್ಲಿ ಒಂದು ವಾರದವರೆಗೆ ಕಾಯಬೇಕಾಯಿತು. ಪ್ರೌಢಶಾಲೆಯ ಅನುಮತಿಯ ಎಲ್ಲಾ ಕೆಲಸಗಳು ಮುಗಿದ ಬಳಿಕ ಆರ್ಥಿಕ ಮಂತ್ರಿಗಳ ದಸ್ಕತ್ತು ಹಾಕಿಸುವ ಒಂದು ಜವಾಬ್ದಾರಿ ಬಾಕಿ ಉಳಿಯಿತು. ಕಾರಣ ಆ ದಿವಸ ಆರ್ಥಿಕ ಸಚಿವರು ಅತೀ ಅವಶ್ಯದ ಒಂದು ಕೆಲಸದ ಪ್ರಯುಕ್ತ ನವಹೆಹಲಿಗೆ ತೆರಳಿದ್ದರು. ಶ್ರೀ ಅಗೋಸ್ತಿನ್ ಲೋಬೋರವರು ಅಂದು ಬೆಂಗಳೂರುನಿAದ ಊರಿಗೆ ಬಂದಿದ್ದರು. ಕೂಡಲೇ ನಾವು ಅವರಿದ್ದಲ್ಲಿಗೆ ತೆರಳಿ ಮಂಜೂರಾತಿಯ ವಿಷಯವನ್ನು ವಿಚಾರಿಸಿದಾಗ ಇವತ್ತು ಸಂಜೆ ಶ್ರೀ ವೀರಪ್ಪ ಮೊÊಲಿಯವರು ದೆಹಲಿಯಿಂದ ಬೆಂಗಳೂರಿಗೆ ಬಂದು ನಮ್ಮ ಶಾಲೆಯ ಮಂಜೂರಾರಿಯ ಅನುಮತಿ ಪತ್ರಕ್ಕೆ ದಸ್ಕತ್ತನ್ನು ಹಾಕಿ ಮಂಗಳೂರಿಗೆ ಬರುವವರಿದ್ದಾರೆ. ಅಲ್ಲಿಗೆ ಹೋಗಿ ಈ ವಿಚಾರವನ್ನು ತಿಳಿಯಿರಿ ಎಂಬುದಾಗಿ ಸೂಚಿಸಿದರು. ನಾವು ಕೂಡಲೇ ಆರ್ಥಿಕ ಸಚಿವರನ್ನು ಭೇಟಿ ಮಾಡಲು ಮಂಗಳೂರಿನ ಪ್ರವಾಸಿ ಬಂಗಲೆಗೆ ಹೋದೆವು. ಆರ್ಥಿಕ ಮಂತ್ರಿಯವರು ನಮ್ಮನ್ನು ಕಂಡೊಡನೆ ಶಂಕರಪುರದ ಅನುದಾನಿತ ಪ್ರೌಢಶಾಲೆಗೆ ದಸ್ಕತ್ತು ಮಾಡಿ ಬಂದಿರುತ್ತೇನೆ. ನೀವು ನಾಳೆಯಿಂದಲೆ ಮಕ್ಕಳನ್ನು ಶಾಲೆಗೆ ಸೇರಿಸಿ ತರಗತಿಗಳನ್ನು ಪ್ರಾರಂಭಿಸಿ ಎಂಬುದಾಗಿ ಸೂಚಿಸಿದರು. ಮಾತ್ರವಲ್ಲದೆ ಒಂದು ವಾರದೊಳಗೆ ಬರಹ ಮೂಲಕ ಆಜ್ಞೆಯನ್ನು ಕಳುಹಿಸಲಾಗುವುದು ಎಂದರು. ಮಂತ್ರಿಗಳು ಹೇಳಿದಂತೆ ಆಜ್ಞೆಯು ಕೈ ಸೇರಿತು. ಮಕ್ಕಳನ್ನು ಶಾಲೆಗೆ ಸೇರಿಸಿದೆವು. ಅನುದಾನಿತ ಶಾಲೆಯಾದರೂ ಐದು ವರುಷಗಳವರೆಗೆ ಸರಕಾರದಿಂದ ಯಾವತ್ತೂ ಧನಸಹಾಯ ಸಿಗುವ ಅಪೇಕ್ಷೆಪಡದೆ ಧರ್ಮಕ್ಷೇತ್ರಕ್ಕೆ ಒಳಪಟ್ಟ ಉದಾರಿಗಳ ಆರ್ಥಿಕ ಸಹಕಾರದಿಂದಲೆ ಶಾಲೆಯನ್ನು ನಡೆಸಲಾರಂಭಿಸಿದೆವು. ಧರ್ಮಕ್ಷೇತ್ರದ ಜನರು ಎಷ್ಟೊಂದು ಉದಾರ ಮನಸ್ಸಿನವರೆಂದರೆ ಮಲ್ಲಿಗೆ ಹೂವಿನ ಕೃಷಿಯನ್ನು ಜೀವನಾಧಾರವಾಗಿ ಅವಲಂಭಿಸಿ ಜೀವನ ಸಾಗುತ್ತಿದ್ದವರು ವರ್ಷದಲ್ಲಿ ಹೂವಿಗೆ ಅತೀ ಹೆಚ್ಚು ಕ್ರಯ ಬೀಳುವ ದಿನವನ್ನು ಆರಿಸಿ ಎಲ್ಲರೂ ತಪ್ಪದೆ ಅಂದಿನ ಹೂವಿನ ಸಂಪೂರ್ಣ ಉತ್ಪತ್ತಿಯ ಮೊತ್ತವನ್ನು ಪ್ರೌಢಶಾಲೆಯ ನಿರ್ವಹಣೆಗಾಗಿ ಧರ್ಮಗುರುಗಳಿಗೆ ಹೂವಿನ ಸಾಹುಕಾರರ ಮುಖಾಂತರ ಪ್ರತಿ ವರುಷವೂ ಕೊಡಲು ನಿರ್ಧರಿಸಿದರು. ಹೀಗೆ ಶಂಕರಪುರದ ಮಲ್ಲಿಗೆ ಹೂವಿನ ಕೃಷಿಕರು ಹೊಗಳಿಕೆಗೆ ಪಾತ್ರರು ಎಂಬುದಾಗಿ ತಿಳಿಸಲು ನಾನು ಹೂವಿನ ಕೃಷಿಕನಾಗಿದ್ದು ಹೆಮ್ಮೆಪಡುತ್ತೇನೆ. ಮಾತ್ರವಲ್ಲದೆ ಪ್ರೌಢಶಾಲೆಗೆ ತನು-ಮನ-ಧನಗಳಿಂದ ಸಹಕರಿಸಿದ ನಮ್ಮ ಊರಿನ ಪರವೂರಿನಲ್ಲಿ ದುಡಿಯುತ್ತಿದ್ದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನಮ್ಮ ಪ್ರೌಢಶಾಲೆಯ ಸ್ಥಾಪನೆಯ ಆರಂಭದ ವರುಷಗಳಲ್ಲಿ ಅತಿ ಕಡಿಮೆ ವೇತನವನ್ನು ಪಡೆದು ಸೇವೆಯನ್ನು ಸಲ್ಲಿಸಿದ ಶಿಕ್ಷಕ, ಶಿಕ್ಷಕಿಯರು ಹಾಗೂ ಶಿಕ್ಷಕೇತರ ವರ್ಗದವರಿಗೆ ತುಂಬು ಹೃದಯದ ಕೃತಜ್ಞತೆಗಳು. ಶಾಲಾರಂಭದ ವರ್ಷಗಳಲ್ಲಿ ನಿವೃತ್ತಿ ಜೀವನದ ಹರಯದಲ್ಲಿ ಹುಮ್ಮನಸ್ಸಿನಿಂದ ಶಾಲೆಯ ಸರ್ವತೋಮುಖ ಏಳಿಗೆಗಾಗಿ ದುಡಿದು ಯೋಗ್ಯ ಮಾರ್ಗದರ್ಶನ ನೀಡಿದಂತಹ ಪ್ರಥಮ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ ಶ್ರೀ ಪಿ. ವಿಠಲ ಶೆಣೈ ಇವರಿಗೆ ಕೂಡ ತುಂಬು ಹೃದಯದ ಕೃತಜ್ಷತೆಗಳು ಹಾಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಶಾಲೆಯ ಸ್ಥಾಪನೆ ಹಾಗೂ ಏಳಿಗೆಗಾಗಿ ಹಗಲಿರುಳೆನ್ನದೆ ದುಡಿದು ಸೇವೆಗೈದ ಪ್ರಾಮಾಣಿಕ ವ್ಯಕ್ತಿಯಾಗಿ ಶ್ರೀ ಪಿ. ವಿಠಲ ಶೆಣೈಯವರ ಬಳಿಕ ಬೆಳ್ಳಿ ಹಬ್ಬ ಆಚರಿಸುವ ಆರಂಭದವರೆಗೆ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಜೋನ್ ಲೋಬೋರವರಿಗೆ ಅನಂತಾನAತ ಧನ್ಯವಾದಗಳು. ಇವರ ನಿವೃತ್ತಿ ಜೀವನವು ತೃಪ್ತಿ ಹಾಗೂ ಆರೋಗ್ಯದಿಂದ ಸಾಗಲಿ ಎಂದು ಪ್ರಾರ್ಥಿಸುತ್ತೇನೆ. ಶಾಲೆಯ ಸ್ಥಾಪನೆ ಹಾಗೂ ಏಳಿಗೆಗಾಗಿ ಹಗಲಿರುಳೆನ್ನದೆ ದುಡಿದು ಸೇವೆಗೈದು ತನ್ನ ತನುಮನಧನಗಳಿಂದ ತ್ಯಾಗ ಜೀವನವನ್ನು ನಡೆಸಿದ ದಿವಂಗತ ವಂದನೀಯ ರೆ.ಫಾ. ಜಿ.ಬಿ ಡಿಸೋಜರವರ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಅನುಗ್ರಹಿಸಲೆಂದು ಪರಮಾತ್ಮನಲ್ಲಿ ಪ್ರಾರ್ಥಿಸುತ್ತೇನೆ. ಶಾಲೆಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಕಛೇರಿಯ ಕಾರ್ಯಗಳಿಗೆ ಹೋಗಿ ಕ್ಲಪ್ತ ಸಮಯದಲ್ಲಿ ಕೆಲಸ ಪೂರ್ತಿಗೊಳಿಸಲು ದುಡಿದು ಜನಪ್ರಿಯರಾದ ದಿವಂಗತ ಶ್ರೀ ಅಗೋಸ್ತಿನ್ ಲೋಬೋ ಹಾಗೂ ದಿವಂಗತ ಜೆರಾಲ್ಡ್ ಮಾರ್ಟಿಸ್ ಮತ್ತು ಆರ್ಥರ್ ರೊಡ್ರಿಗಸ್ ಅವರ ದಿವ್ಯಾತ್ಮಕ್ಕೆ ಪರಮಾತ್ಮನು ಚಿರಶಾಂತಿ ಕರುಣಿಸಲೆಂದು ಪ್ರಾರ್ಥನೆಯನ್ನು ಸಲ್ಲಿಸಿ, ರಜತಮಹೋತ್ಸವವು ಅರ್ಥಪೂರ್ಣವಾಗಿ ಹಾಗೂ ಯಶಸ್ವಿಯಾಗಿ ಜರಗಲಿ ಎಂದು ಶುಭಹಾರೈಸಿ ಶಾಲೆಯ ಸ್ಥಾಪನೆಯ ಹಾಗೂ ಅದರ ನಂತರದ ಆಗುಹೋಗುಗಳನ್ನು ಮುಕ್ತಾಯಗೊಳಿಸುತ್ತೇನೆ.

ಸಿರಿಲ್ ಡಾಯಸ್

ನಿವೃತ್ತ ಮುಖ್ಯೋಪಾಧ್ಯಾಯರು ಸಂತಜೋನರ ಹಿ. ಪ್ರಾ. ಶಾಲೆ, ಮೂಡಬೆಟ್ಟು,ಶಂಕರಪುರ – ೫೭೪೧೧೫